Product Description
ಡಾ. ಸಿದ್ದಲಿಂಗಯ್ಯನವರು ಕನ್ನಡದ ಅತ್ಯುತ್ತಮ ಗದ್ಯ ಬರಹಗಾರರಲ್ಲಿ ಒಬ್ಬರು ಎನ್ನುವುದನ್ನು ಸಾಕ್ಷೀಕರಿಸುವ ಮೂವತ್ಮೂರು ಲೇಖನಗಳು ‘ಆ ಮೂಲೆ ಈ ಮೂಲೆ’ಯಲ್ಲಿವೆ. ಬುದ್ಧ, ಬಸವಣ್ಣ, ಗಾಂಧಿ, ಅಂಬೇಡ್ಕರ್, ಲೋಹಿಯಾ, ಮಾರ್ಕ್ಸ್, ಪೆರಿಯಾರ್, ಓಶೋ, ಕುವೆಂಪುರವರ ಬದುಕು, ಚಿಂತನೆ, ಸಿದ್ಧಾಂತಗಳನ್ನು ಪ್ರೀತಿಯಿಂದ ಗಮನಿಸಿದ ಮತ್ತು ಸ್ವೀಕರಿಸಿದ, ಪ್ರಗತಿಶೀಲತೆಯ ಜೊತೆಗೆ ಬಂಡಾಯ ಮನೋಧರ್ಮವನ್ನು ಮೈಗೂಡಿಸಿಕೊಂಡ ವ್ಯಕ್ತಿತ್ವವೊಂದರ ಅಭಿವ್ಯಕ್ತಿಯ ಮಾದರಿ ಈ ಬರಹಗಳಲ್ಲಿ ಸ್ಫುಟವಾಗಿ ಕಾಣುತ್ತದೆ. ಸಾಂಸ್ಕೃತಿಕ ಜಾಥಾಗಳಲ್ಲಿ, ವಿಚಾರ ಸಂಕಿರಣಗಳಲ್ಲಿ, ಅಂಬೇಡ್ಕರ್ ದಿನಾಚರಣೆ-ಸಂಸ್ಮರಣೆಗಳಲ್ಲಿ, ಸಾಹಿತ್ಯ ಸಮ್ಮೇಳನಗಳಲ್ಲಿ, ಪುಸ್ತಕ ಬಿಡುಗಡೆ ಸಮಾರಂಭಗಳಲ್ಲಿ ಸಿದ್ಧಲಿಂಗಯ್ಯನವರು ಮಾಡಿದ ಭಾಷಣ ಮತ್ತು ಉಪನ್ಯಾಸಗಳು ಇಲ್ಲಿ ಲೇಖನರೂಪಕ್ಕಿಳಿದಿವೆ. ಜೊತೆಗೆ ಅವರು ಬೇರೆಬೇರೆ ಕಾರಣಗಳಿಗಾಗಿ ಇಷ್ಟಪಡುವ ಸಾಹಿತಿಗಳ, ರಾಜಕಾರಣಿಗಳ, ಹೋರಾಟಗಾರರ ಅಪರೂಪದ ವಿವರಗಳಿಂದ ಕೂಡಿದ ಆಪ್ತಧಾಟಿಯ ವ್ಯಕ್ತಿಚಿತ್ರಗಳಿವೆ.