Product Description
ವಿಚಾರವಾದ - ವೈಜ್ಞಾನಿಕ ಮನೋಭಾವ ಇಂದಿನ ವಿಜ್ಞಾನ ಯುಗದಲ್ಲೂ ಮಾನವನಲ್ಲಿ ಬೆಳೆದುಬಂದಿಲ್ಲವೆಂದರೆ ಅದಕ್ಕೆ ಕಾರಣ ಏನಿರಬಹುದು? ಸಂಖ್ಯೆಯಲ್ಲಿ ಬಹಳ ಕಡಿಮೆಯಿರುವ ವಿಚಾರವಂತರು ಎಷ್ಟೇ ಪ್ರಯತ್ನಿಸಿದರೂ ಮೌಢ್ಯದ ಬೇರನ್ನು ಕಿತ್ತೊಗೆಯಲು ಇಷ್ಟೊಂದು ಕಷ್ಟವೇಕೆ? ಇದು ಈ ಪುಸ್ತಕದಲ್ಲಿ ಪ್ರತಿಪಾದನೆಗೊಂಡ ಒಂದು ಸಾಂದರ್ಭಿಕ ಪ್ರಶ್ನೆ ಮತ್ತು ಅಷ್ಟೇ ಕುತೂಹಲದ ವಿಚಾರ ಕೂಡ. ಮೂಢನಂಬಿಕೆ ವಿಚಾರವಾದಕ್ಕೆ ಮಾರಕವೆಂಬುದರಲ್ಲಿ ಎರಡು ಮಾತಿಲ್ಲ. ಅಸತ್ಯವನ್ನು ಸತ್ಯವೆಂಬಂತೆ ಮುಗ್ಧಜನರನ್ನು ನಂಬಿಸಿ ಅದನ್ನೇ ಪರಿಪಾಲಿಸಬೇಕೆನ್ನುವ ಧಾರ್ಮಿಕ ಬೆದರಿಕೆ ಇಂದು ಎಲ್ಲೆಲ್ಲೂ ವಿಜೃಂಭಿಸುತ್ತದೆ. ಅನಕ್ಷರಸ್ಥರು ಹಾಗಿರಲಿ, ಪದವಿ ಪಡೆದು ವೈಜ್ಞಾನಿಕ ಕ್ಷೇತ್ರದಲ್ಲಿ ಮುಳುಗಿ ಈಜಾಡಿ ಉನ್ನತ ಹುದ್ದೆ ಸಂಪಾದಿಸಿ ಜವಾಬ್ದಾರಿ ಸ್ಥಾನದಲ್ಲಿರುವವರೂ ಕೂಡ ಮೌಢ್ಯಕ್ಕೆ ಬಲಿಯಾಗಿದ್ದಾರೆಂದರೆ ಇನ್ನು ಶ್ರೀಸಾಮಾನ್ಯನ ಪಾಡೇನು? ಮನುಷ್ಯನ ಭಾವನೆಗಳು ಮೇಲುಗೈ ಪಡೆದು ವಿಚಾರವು ಅದರ ಸೇವಕನಾದಾಗ ಇಂತಹ ಬೌದ್ಧಿಕ ದಿವಾಳಿತನ ಬರುತ್ತದೆ. ದುರಂತವೆಂದರೆ ವಿಜ್ಞಾನದ ಕೊಡುಗೆಗಳಾದ ಮೊಬೈಲ್, ಅಂತರ್ಜಾಲವನ್ನುಪಯೋಗಿಸಿಕೊಂಡೇ ಮೌಢ್ಯ ವಿಸ್ತರಿಸುವ, ವಿಜ್ಞಾನದ ಸಕಲ ಸೌಕರ್ಯಗಳನ್ನೂ ಅನುಭವಿಸುತ್ತ ಮೌಢ್ಯದಲ್ಲಿರುವವರಿದ್ದಾರೆ. ಇಂಥ ವಿಚಾರಗಳಿಗೆ ಒತ್ತುಕೊಡುವ ಅಪರೂಪದ ಕೃತಿಯಿದು.