Product Description
ಇಂದು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮಕ್ಕಲಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಬೇಕಾಗಿರುವ ಪ್ರಸ್ತುತತೆಯ ಬಗ್ಗೆ ಶಿಕ್ಷಣ ತಜ್ಞರಲ್ಲಿ ವಾದ, ವಿವಾದ, ಸಂವಾದಗಳು ನಡೆಯುತ್ತಿವೆ. ಇತ್ತೀಚಿನವರೆಗೆ ಧರ್ಮ, ಸಂಪ್ರದಾಯ ಮತ್ತು ಸಾಮಾಜಿಕ ಕಟ್ಟುಪಾಡುಗಳು ಯಾವುದು ಸರಿ, ಯಾವುದು ತಪ್ಪು ಎಂಬುದರ ಬಗ್ಗೆ ವಿವಾದರಹಿತವಾದ ಸನಾತನ ಸೂತ್ರಗಳನ್ನು ಹೊಂದಿದ್ದುವು. ಪ್ರಜಾಪ್ರಭುತ್ವದ ಪದ್ಧತಿಯ ಜೀವನ ವಿಧಾನ ಯಶಸ್ವಿಯಾಗಬೇಕಾದರೆ ಗತಕಾಲದ ನೀತಿ, ಅನೀತಿಗಳ ಬಂಧನದಿಂದ ಹೊರಬಂದು ಸಮಾನತೆ, ಸ್ವಾತಂತ್ರ್ಯ ಹಾಗೂ ಸೋದರಭಾವಗಲನ್ನು ಉದ್ದೀಪನಗೊಳಿಸುವ ಮಾನವೀಯ ಮೌಲ್ಯಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಬೇಕಾಗುತ್ತದೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಅನುಸರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ದಾಸಿ ಪನ್ನಾಳ ರಾಜನಿಷ್ಠೆಯ ಮೂಲಕ ಪ್ರಾರಂಭಿಸಿ ಅದರ ಅಪ್ರಸ್ತುತತೆಯನ್ನು ಹೇಳುತ್ತಲೇ ಅವರು ಇಂದಿನ ಕಾಲಮಾನಕ್ಕೆ ಅಗತ್ಯವಾದ ಸಮಾನತೆ, ಶಾಂತಿ, ಸಹಬಾಳ್ವೆ, ಮಾನವ ಹಕ್ಕುಗಳ ಮನ್ನಣೆ, ಸಾರ್ವಜನಿಕ ಆಸ್ತಿಪಾಸ್ತಿಗಳ ರಕ್ಷಣೆ, ಅಂಧಶ್ರದ್ಧೆಯ ನಿವಾರಣೆ, ಶ್ರಮ ಗೌರವ ಪ್ರಜ್ಞೆ ಇತ್ಯಾದಿಗಳನ್ನು ಮಕ್ಕಳ ಶಿಕ್ಷಣದಲ್ಲಿ ಅಳವಡಿಸುವುದು ಹೇಗೆಂಬುದನ್ನು ವಿವರವಾಗಿ ಈ ಪುಸ್ತಕದಲ್ಲಿ ವಿಶ್ಲೇಷಣೆ ಮಾಡಲಾಗಿದೆ. ಸಮಾಜದಲ್ಲಿ ಮೌಲ್ಯ ಸಮೃದ್ಧಿಯನ್ನು ನೋಡಲು ಬಯಸುವ ಪೋಷಕರು - ಶಿಕ್ಷಕರು - ಶಿಕ್ಷಣ ಪ್ರೇಮಿಗಳು ಹಾಗೂ ವಿದ್ಯಾರ್ಥಿಗಳು ಓದಲೇ ಬೇಕಾದ ಪ್ರಭಾವಶಾಲಿ ಕೃತಿ ಇದು.