Product Description
ಪ್ರಕೃತಿಯ ಸೃಷ್ಟಿಗಳಾದ ಮಕ್ಕಳಲ್ಲಿ ಪ್ರಕೃತಿ ಸಹಜವಾದಂತಹ ಚತುರತೆ, ವಿವೇಕ ಮತ್ತು ಬಾಳ್ವೆಯ ಗುಣಗಳಿರುತ್ತವೆ. ಈ ಮೂರು ಗುಣಗಳ ಅರ್ಥಗ್ರಹಣವೇ ಜ್ಞಾನ. ಈ ಜ್ಞಾನದ ಇರುವಿಕೆಯ ಅರಿವೇ ಪ್ರಜ್ಞೆ. ಹಾಗಾಗಿ ಮಕ್ಕಳು ಸಹವಾಗಿಯೇ ಜ್ಞಾನಿಗಳು ಮತ್ತು ಪ್ರಜ್ಞಾವಂತರು.
ಯಾವುದೇ ಚೌಕಟ್ಟುಗಳಿಲ್ಲದ ಮಕ್ಕಳನ್ನು ಬೆಳೆಸಲು ಪೋಷಕರು, ಪಾಲಕರು ಮತ್ತು ಶಿಕ್ಷಕರು ತಾವಿರುವ ಚೌಕಟ್ಟುಗಳನ್ನು ಮೀರಲೇ ಬೇಕು. ಮಕ್ಕಳ ಹದವಾದ ಮನೋಭೂಮಿಯಲ್ಲಿ ಅರಿವಿಗೆ ಕೊಂಡೊಯ್ಯುವ ಮತ್ತು ಅವರಿಗಿರುವ ಪರಮ ಜ್ಞಾನವನ್ನು ತಾವೇ ತಾವು ವ್ಯವಹರಿಸುತ್ತಿರುವ ಭಾಷೆಯಲ್ಲಿ ವಿವರಿಸಿಕೊಳ್ಳಲಾಗುವಂತಹ ವಿಚಾರಗಳನ್ನು ಬಿತ್ತುವಲ್ಲಿ ನಮ್ಮ ಪಾತ್ರ ಮಹತ್ವವಿದೆ. ಬಿತ್ತಿದಂತೆ ಬೆಳೆ.
ಸರಿಯಾಗಿ ಉತ್ತೋಣ, ಅವರ ಇರುವಿಕೆಗೆ, ಬಾಳ್ವೆಗೆ, ವಿಕಾಸಕ್ಕೆ ಅಗತ್ಯವಾಗಿರುವುದ ಬಿತ್ತೋಣ. ಅವರು ಅವರಂತೆಯೇ ಬೆಳೆಯುವ ಪ್ರಕ್ರಿಯೆಯಲ್ಲಿ ಎದುರಾಗುವ ಘಾತುಕ ಶಕ್ತಿಗಳಿಂದ ಅವರನ್ನು ರಕ್ಷಿಸೋಣ.
ಮಕ್ಕಳನ್ನು ಪೋಷಿಸುವ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲುವ ಈ ಹೊತ್ತಿಗೆಯಲ್ಲಿ ಗರ್ಭ ಸಂಸ್ಕಾರ, ಆರಂಭಿಕ ಪೋಷಣೆಗಳು, ವಿವಿಧ ರೀತಿಯ ಅಳುಗಳನ್ನು ಗುರುತಿಸುವುದು, ಒಡಹುಟ್ಟುಗಳಲ್ಲಿನ ಸಂಘರ್ಷ (ಸಿಬ್ಲಿಂಗ್ ರೈವಲ್ರೀ), ಪ್ರಯಾಣದ ಕಾಲದಲ್ಲಿ ಮಕ್ಕಳ ಕುರಿತಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು, ಚೈಲ್ಡ್ ಅಬ್ಯೂಸ್ - ಹೀಗೆ ಹಲವು ಅಗತ್ಯ ವಿಷಯಗಳನ್ನು ಇದರಲ್ಲಿ ಪ್ರಸ್ತುತಪಡಿಸಲಾಗಿದೆ.