Product Description
‘ಹುಲಿಯು ಪಂಜರದೊಳಿಲ್ಲ’ ಕೃತಿ ಒಂದು ಬಗೆಯ ಬೆರಗಿನ ಲೋಕವೊಂದರ ಸಂದರ್ಶನಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಆದರೆ, ಅದು ಬೆರಗಿನ ಬೆಡಗಲ್ಲ. ಅಚ್ಚರಿಯ ಆಹ್ಲಾದವೂ ಅಲ್ಲ. ಪಾಪಲೇಪಿತ ನಿಗೂಢತೆಯನ್ನು ಕಂಡುಬಿಟ್ಟಾಗ ಉಂಟಾಗುವ ದಿಕ್ಕೆಟ್ಟತನ ಅದು. ಸಕಾರಾತ್ಮಕವಾದ ದರ್ಶನವಾದರೆ ಅದು ಸಾಕ್ಷಾತ್ಕಾರ. ಆದರೆ ಪಾಪಕೂಪದ ಕೇಡು ಕಂಡಾಗ ಹುಟ್ಟುವ ಈ ಭಾವವೇ ಭಯಂಕರ.
ಪರಿಸರ ವಿನಾಶದ ಪಾಪ ಮಾನವ ಕುಲವನ್ನು ಬೆಂಬಿಡದ ಶಾಪವಾಗಿ ಕಾಡತೊಡಗಿದೆ. ಸಾವಿನ ಗಂಟೆ ಬಾರಿಸಿತೆಂದರೆ ಅದು ಯಾರದೆಂದು ಕೇಳಬೇಡ. ಅದು ನನ್ನದೂ ಆಗಿರಬಹುದು. ಪ್ರತಿ ಜೀವ ಸಂಕುಲ ಕಣ್ಮರೆಯಾದಾಗಲೂ ನಾನು ಕ್ಷೀಣವಾಗುತ್ತೇನೆ. ಯಾಕೆಂದರೆ ನಾನು ಈ ಪ್ರಾಣಿ ಸಂಕುಲದ ಅಂಗವಾಗಿದ್ದೇನೆ ಎಂಬಂತಹ ವಿವೇಚನಾ ಪೂರ್ಣ ವಿವೇಕಕ್ಕೆ ಮನುಕುಲ ಎಚ್ಚರವಾಗಿರಬೇಕು. ಇಲ್ಲದಿದ್ದರೆ ನಮಗೆ ಗೊತ್ತಿರುವ ಈ ಒಂದೇ ಒಂದು ಭೂಮಿಯ ಮೇಲೂ ಇರಲು ನಮಗೆ ಅವಕಾಶ ಮಿಗುವುದಿಲ್ಲ. ಪರಿಸರ ರಕ್ಷಣೆಯ ಬಗೆಗಿನ ನಮ್ಮ ಸಂವೇದನೆಗಳನ್ನು ಸೂಕ್ಷ್ಮಗೊಳಿಸುವ ನಿಟ್ಟಿನಲ್ಲಿ ಈ ಕೃತಿ ಅತ್ಯಂತ ಪರಿಣಾಮಕಾರಿಯಾಗಿದೆ. ಬಣ್ಣ ಬಣ್ನದ ಬೂಸಿ ಬಿಡುತ್ತಾ ಪರಿಸರ ಹಾಗೂ ವನ್ಯಜೀವಿ ರಕ್ಷಕರೆಂದು ಕರೆದುಕೊಳ್ಳುವವರ ನಿಜ ಬಣ್ಣಗಳನ್ನೂ ಇದು ಬಿಚ್ಚಿ ತೋರಿಸುತ್ತಿದೆ.