Product Description
ಬೆಂಗಳೂರಿನ ಬಿಸಿ ಏರ್ತಾ ಇದೆಯಂತೆ, ಅಂಟಾರ್ಟಿಕಾದ ಹಿಮ ಕರಗ್ತಾ ಇದೆಯಂತೆ, ಗಂಗಾ ನದಿ ಹಿಂದೆ ಸರಿತಾ ಇದೆಯಂತೆ, ಅಯ್ಯೋ ಬಿಡ್ರಿ ಈ ವಿಜ್ಞಾನಿಗಳು ಹೇಳೋದೇ ಒಂದು, ಆಗ್ತಾ ಇರೋದೆ ಇನ್ನೊಂದು, ಬಿಸಿ, ಬಿಸಿ ಅಂತಾರೆ ಈ ಸಲ ಚಳಿಗಾಲದಲ್ಲಿ ಥರ, ಥರ ಅಂತಾ ನಡುಗಲಿಲ್ವ? ಡೆಲ್ಲಿಲ್ಲಂತೂ ಹಿಂದೆಂದೂ ಇರದಷ್ಟು ಚಳಿ ಈ ಸಲ ಇತ್ತು. ಕಾಶ್ಮೀರ ಕಣಿವೆ ಹಿಮದಿಂದ ಮುಚ್ಚಿಹೋಗಿತ್ತು. ಇಂತಹ ಮಾತುಗಳು ನಾವು ನಿತ್ಯ ಕೇಳುವ ಮಾತುಗಳಾಗಿವೆ. ಏರುತ್ತಿರುವ ತಾಪಮಾನ ಅಂತಾ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಚರ್ಚೆ ಆಗ್ತಾ ಇದ್ರೆ, ಸ್ಥಳೀಯರು ಚಳಿ, ಚಳಿ ಅಂತಾ ನಡುಗ್ತಾ ಇದೀವಲ್ಲ ಇದು ಹೇಗೆ? ಅಂತಾ ತಲೆ ಕೆರೆದುಕೊಳ್ತಾರೆ.
ಇಂತಹ ಸಾಮಾನ್ಯ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡುವ ಪ್ರಯತ್ನ ಈ 'ಶತಮಾನದ ಸವಾಲು' ಕೃತಿಯಲ್ಲಿ ಮಾಡಲಾಗಿದೆ. ಬಿಸಿಯೇರುತ್ತಿರುವ ಭೂಮಿ, ಬದಲಾಗುತ್ತಿರುವ ಹವಾಮಾನ ಇದಕ್ಕೆಲ್ಲಾ ಯಾರು ಕಾರಣ? ಇದರಿಂದ ಮುಂದೆ ಆಗಬಹುದಾದ ತೊಂದರೆಗಳು ಏನು? ಇದನ್ನು ತಡೆಯಬಹುದೇ? ಇದನ್ನ ತಡೆದು ಭೂಮೀನಾ ಉಳಿಸಬೇಕು ಅನ್ನೋದಾದ್ರೆ ನಾವೇನು ಮಾಡಬೇಕು? ಅಷ್ಟಕ್ಕೂ ಭೂಮಿ ಬಿಸಿಯಾಗ್ತಾ ಇದೆಯಾ? ಯಾಕೆ ಬಿಸಿಯಾಗ್ತಾ ಇದೆ? ಇಂತಹ ಹಲವಾರು ಪ್ರಶ್ನೆಗಳಿಗೆ ವೈಜ್ಞಾನಿಕ ಉತ್ತರ ಈ ಪುಸ್ತಕದಲ್ಲಿದೆ. ಇದನ್ನು ಬರೆದಿರುವ ಲೇಖಕಿ ಸುಮಂಗಲಾ ಎಸ್. ಮುಮ್ಮಿಗಟ್ಟಿ ವಿಜ್ಞಾನ ಸಂವಹನಕ್ಕಾಗಿ ಭಾರತದ ಅತ್ಯುನ್ನತ ಪ್ರಶಸ್ತಿಯಾದ 'ರಾಷ್ಟ್ರೀಯ ವಿಜ್ಞಾನ ಸಂವಹನ' ಪ್ರಶಸ್ತಿ ಪುರಸ್ಕೃತೆ; ರಾಜ್ಯ ಪರಿಸರ ಪತ್ರಿಕೋದ್ಯಮ, ರಾಜ್ಯ ಪರಿಸರ ಪಶಸ್ತಿಗಳಲ್ಲದೆ ಏರುತ್ತಿರುವ ತಾಪಮಾನದ ಪರಿಣಾಮವನ್ನು ಕುರಿತ 'ಫಾರ್ಮಿಂಗ್ ಇನ್ ದಿ ವಾರ್ಮಿಂಗ್ ವರ್ಲ್ಡ್' ಕಾರ್ಯಕ್ರಮಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ 'ಅತ್ಯುತ್ತಮ ಕಾರ್ಯಕ್ರಮ ಪ್ರಶಸ್ತಿ' ಪುರಸ್ಕೃತರೂ ಹೌದು. ಅವರ ಹಲವಾರು ವಿಜ್ಞಾನ ಮತ್ತು ಪರಿಸರ ಸಂಬಂಧಿ ಪುಸ್ತಕಗಳು ಈಗಾಗಲೇ ಪ್ರಕಟವಾಗಿವೆ. ಇವರ 'ಭೂಮಿಯೊಂದೇ ಭವಿಷ್ಯವೊಂದೇ' ಪುಸ್ತಕಕ್ಕೆ ೨೦೧೧ರ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡಮಿಯಿಂದ 'ಅತ್ಯುತ್ತಮ ವಿಜ್ಞಾನ ಲೇಖಕಿ' ಪ್ರಶಸ್ತಿಯನ್ನೂ ಪಡೆದಿದ್ದಾರೆ.