Product Description
ನವೋದಯ, ಪ್ರಗತಿಶೀಲ, ಸಮನ್ವಯ, ನವ್ಯ, ದಲಿತ, ಬಂಡಾಯ - ಹೀಗೆ ಅನೇಕ ಅಲೆಗಳನ್ನು ಕಟ್ಟಿಕೊಂಡು ಮುಂದೆ ಮುಂದೆ ಹರಿಯುತ್ತಿರುವ ಜೀವನದಿ-ಕನ್ನಡ ಕಾವ್ಯ. ವರ್ತಮಾನದ ಬೀಸಿನಲ್ಲಿ ವಿಜಯಕಾಂತ ಪಾಟೀಲರ ದನಿ ಮೇಳಗೀತದ ಒಂದು ಎಳೆಯಾಗಿ ಕೇಳುತ್ತಿದ್ದರೂ ಕಿವಿಗೊಟ್ಟು ಆಲಿಸಿದರೆ ಅದು ತನ್ನ ‘ತನ್ನತನ’ಕ್ಕಾಗಿ ಸದಾ ಹಂಬಲಿಸುತ್ತ ಸ್ವಲ್ಪ ಭಿನ್ನವಾಗಿಯೇ ಮಿಡಿಯುತ್ತಿದೆ. ಸಂಕಲನದಿಂದ ಸಂಕಲನಕ್ಕೆ ಬೆಳೆಯುತ್ತಲೇ ಇರುವ ಕವಿ ತನ್ನ ಪರಿಸರದ ಕನ್ನಡದ ನುಡಿಗಟ್ಟನ್ನು ಸೂಕ್ಷ್ಮವಾಗಿ ಬಳಸುತ್ತ ವಾಕ್ಯ ವಿನ್ಯಾಸದಲ್ಲಿ ಆಡುಮಾತಿನ ಸಹಜ ಲಯವನ್ನು ಸಾಧಿಸುತ್ತಿದ್ದಾರೆ.
ಕಾಣದ ಕಡಲಲ್ಲ ನೀನು,
ಖಾಯಂ ಒಡಲುರಿ ನೀನು!
ನಿನ್ನ ಕೂಡಿ ನನ್ನ ಶೀಲ
ಕಳೆದುಕೊಳ್ಳಲಾರೆ;
ಒಲ್ಲೆ ಒಳಗೊಳ್ಳಲೊಲ್ಲೆ ನಿನ್ನ...!
ಇಂಥ ವೃತ್ತ ಹೊತ್ತಿರುವ ಕಾವ್ಯ ತನ್ನ ಒಡಲಲ್ಲೇ ಕಡಲನ್ನು ಒಳಗೊಳ್ಳುವ ಸಾಧ್ಯತೆ ಹೊಂದಿರುತ್ತದೆ.