Product Description
ಕನ್ನಡದಲ್ಲಿ ಕಾದಂಬರಿಗಳೇ ಅಪರೂಪವಾಗುತ್ತಿರುವ ಈ ಹೊತ್ತಿನಲ್ಲಿ ಲತಾ ಗುತ್ತಿಯವರ ಈ ಕೃತಿ ಕಾದಂಬರಿಪ್ರಿಯ ಓದುಗರ ಮೆಚ್ಚುಗೆ, ಕೃತಜ್ಞತೆಗಳಿಗೆ ಅರ್ಹವಾಗಿದೆ.
ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ಕೊನೆಯ ದಶಕಗಳಿಂದ ಆರಂಭವಾಗಿ ಸ್ವಾತಂತ್ರ್ಯೋತ್ತರ ಅನಿವಾಸಿ ಭಾರತೀಯ ಯುವಪೀಳಿಗೆಯ ಬದುಕಿನವರೆಗೆ ಈ ಕಾದಂಬರಿ ವ್ಯಾಪಿಸಿಕೊಂಡಿದೆ. ಈ ಕೃತಿಯ ನಾಯಕ ಆಳುವ ಬ್ರಿಟಿಷರ ಮೇಲೆ ಗುಂಡು ಹಾರಿಸಿ ಸಾಯಿಸಿದ್ದರಿಂದ ಅಂಡಮಾನದ ಕರಿನೀರು ಶಿಕ್ಷೆ ಅನುಭವಿಸುತ್ತಾನೆ. ಈ ನಾಯಕ ಸ್ವತಃ ಲೇಖಕಿಯ ಕುಟುಂಬದ ಹಿರಿಯರೇ ಆಗಿರುವುದರಿಂದ ನೈಜ ಕಥೆಯನ್ನು ಎಳೆತನದಿಂದ ಕೇಳುತ್ತ ಬೆಳೆದದ್ದನ್ನು ಲೇಖಕಿ ಹೇಳಿದ್ದಾರೆ. ಎಳೆತನದಲ್ಲೇ ಮನಸ್ಸಿನಲ್ಲಿ ಊರಿಕೊಳ್ಳುವ ನೆನಪುಗಳು ತುಂಬಾ ಪ್ರಬಲವಾಗಿರುತ್ತವಷ್ಟೇ. ಹೀಗಾಗಿ ಕಥೆಗೆ ಆಪ್ತಗುಣ ಒದಗುತ್ತದೆ. ಕಥೆಯನ್ನು ನಿರೂಪಿಸಲು ಅಗತ್ಯವಾದ ‘ಅಪರಿಚಿತತೆಯ ದೂರ’ವೂ ಪ್ರಾಪ್ತವಾಗುತ್ತದೆ.
ಈ ಆಪ್ತತೆ ಮತ್ತು ದೂರಗಳು ಲತಾ ಗುತ್ತಿಯವರ ಬರವಣಿಗೆಯ ಒಂದು ಲಕ್ಷಣವೆಂದೇ ತೋರುತ್ತದೆ. ಈ ಕಾದಂಬರಿಯಲ್ಲೂ ಶ್ರುತಕತೆಯ ಆಪ್ತತೆ ಮತ್ತು ದೂರಗಳು ಮನಸ್ಸಿಗೆ ಬರುತ್ತವೆ.