Product Description
ಶ್ರೀಯುತ ಜಿಎಸ್ ಯುಧಿಷ್ಠಿರ ನಮ್ಮ ಸಾಹಿತ್ಯ-ಸಾಂಸ್ಕೃತಿಕ ಲೋಕ ಗಮನಿಸಬೇಕಾದ ಯುವ ಚಿಂತಕ. ದೇಶದ ಸಮಾಜೋ-ರಾಜಕೀಯ ಬದುಕು ತೀವ್ರಗತಿಯಲ್ಲಿ ಬದಲಾಗುತ್ತಿರುವ ಈ ಸಂಕ್ರಮಣ ಕಾಲದಲ್ಲಿ ಯುಧಿಷ್ಠಿರ ಅವರು ಬದಲಾವಣೆಯ ಗತಿ ಮತ್ತು ವಿಧಾನಗಳನ್ನು ವಸ್ತುನಿಷ್ಠವಾಗಿ ಗುರುತಿಸುವ, ಅವಲೋಕಿಸುವ ಹಾಗೂ ವಿಶ್ಲೇಷಿಸುವ ಪರಿ ವಿಶಿಷ್ಟ. ಹಾಗೆಯೇ ಬದಲಾವಣೆಯ ಪರಿಣಾಮಗಳನ್ನು ಮುಂಗಾಣಲು ಅವರು ನಡೆಸುವ ತಾರ್ಕಿಕ ಪ್ರಯತ್ನಗಳೂ ಅಷ್ಟೇ ಆಸಕ್ತಿಕರ. ಅವರೇ ಹೇಳುವಂತೆ, ಅಧಿಕಾರ ಹಿಡಿದವರನ್ನು ಸಂತುಷ್ಟಗೊಳಿಸುವ ಏಕಮಾತ್ರ ಉದ್ದೇಶದಿಂದ ಬರೆಯುವುದಾದರೆ ಅಪಾತ್ರರ ಮೇಲೂ ಹತ್ತು ಪುಸ್ತಕ ಬರೆದು ಸೈ ಎನ್ನಿಸಿಕೊಳ್ಳಬಹುದಾದ ಅವಕಾಶವಿರುವ ಈ ಕಾಲದಲ್ಲಿ ಅಂತಹ ಬರವಣಿಗೆ ಅವರಿಗೆ ಒಗ್ಗದ ವಿಚಾರ. ಶ್ರೀಯುತರ ಬರಹಗಳನ್ನು ಯಾವುದೇ ಪೂರ್ವಾಗ್ರಹಗಳಿಲ್ಲದೇ ಓದುವ ಯಾರಿಗಾದರೂ ಅವರ ಈ ಮಾತಿನಲ್ಲಿರುವ ಸತ್ಯಗೋಚರವಾಗದೇ ಇರದು. ಅಷ್ಟೇ ಅಲ್ಲ, ಈ ಮಾತು ಅವರ ಬರಹದ ಹಿಂದಿರುವ ನೈತಿಕ ಪ್ರಜ್ಞೆ ಹಾಗೂ ಉದ್ದೇಶಗಳನ್ನೂ ನಮಗೆ ಮನಗಾಣಿಸುತ್ತದೆ. ಅವರ ಈ 'ಹರಹರ ಯೋಗಿ' ಕೃತಿಯನ್ನು ವಿಶ್ವಾಸಾರ್ಹವಾಗಿಸುತ್ತದೆ.
ಭಾರತೀಯತೆಯ ಕ್ರೂಸೇಡರ್ ಎಂದು ಕರೆಯಬಹುದಾದ ನರೇಂದ್ರ ಮೋದಿ ದೆಹಲಿಯಲ್ಲಿ ಸರ್ಕಾರದ ಸಾರಥ್ಯ ಹಿಡಿದು ಮೂರು ವರ್ಷಗಳಾಗುತ್ತಿದ್ದಂತೆ ಹಿಂದೂ ಧರ್ಮ ಹಾಗೂ ಸಂಸ್ಕೃತಿಯ ಕ್ರೂಸೇಡರ್ ಯೋಗಿ ಆದಿತ್ಯನಾಥ್ ಲಖ್ನೋದಲ್ಲಿ ಅಧಿಕಾರ ಸೂತ್ರಗಳನ್ನು ಹಿಡಿದಿದ್ದಾರೆ. ದೇಶದ ಅತಿದೊಡ್ಡ ರಾಜ್ಯದ ಸಾರಥ್ಯವನ್ನು ವಹಿಸಿಕೊಳ್ಳುವುದರ ಮೂಲಕ ಅವರು ಕಾಂಗ್ರೆಸ್ ಹಾಗೂ ಎಡಪಂಥೀಯರ ಅನೈತಿಕ ಸಂಯೋಗದಿಂದ ಜನ್ಮತಾಳಿ ಈ ದೇಶವನ್ನು ಕ್ಯಾನ್ಸರ್ನಂತೆ ಕಾಡುತ್ತಿರುವ ಹುಸಿ ಜಾತ್ಯಾತೀತತೆ ಹಾಗೂ ಅಲ್ಪಸಂಖ್ಯಾತರ ತುಷ್ಟೀಕರಣಗಳಂತಹ ಪಿಡುಗುಗಳಿಂದ ರಾಷ್ಟ್ರವನ್ನು ಪಾರು ಮಾಡಲು ಮೋದಿ ನಡೆಸುತ್ತಿರುವ ಹೋರಾಟದಲ್ಲಿ ಸಮರ್ಥ ಸೇನಾನಿಯ ಜವಾಬ್ದಾರಿ ನಿರ್ವಹಿಸಹೊರಟಿದ್ದಾರೆ. ರಾಜ್ಯದ, ರಾಷ್ಟ್ರದ ಕುರಿತಾಗಿ ಈ ಯೋಗಿಯ ಚಿಂತನೆಗಳ, ಕಾರ್ಯಯೋಜನೆಗಳ ಸಮಗ್ರ, ಸ್ಪಷ್ಟ ಚಿತ್ರಣಗಳನ್ನು ಶ್ರೀಯುತ ಯುಧಿಷ್ಠಿರ ಈ ಕೃತಿಯಲ್ಲಿ ವಿವರಣಾತ್ಮಕವಾಗಿ ಹಾಗೂ ವಿಶ್ಲೇಷಣಾತ್ಮಕವಾಗಿ ನಮ್ಮ ಮುಂದಿರಿಸಿದ್ದಾರೆ. ಈ ಅರ್ಥದಲ್ಲಿ, ಯುಧಿಷ್ಠಿರರ ಈ 'ಹರಹರ ಯೋಗಿ' ಕೃತಿ ಪ್ರಸಕ್ತ ಭಾರತಕ್ಕೊಂದು ವಿಶ್ವಾಸಾರ್ಹ ಕಿಟಕಿಯಾಗುತ್ತದೆ.