Product Description
ದೇವರ ಬಗೆಗಿನ ಕಲ್ಪನೆ ಇಂದು ನಿನ್ನೆಯದಲ್ಲ. ಮನುಷ್ಯನ ಬುದ್ಧಿ ವಿಕಾಸಗೊಳ್ಳಲು ಪ್ರಾರಂಭ ಆದಾಗಿನಿಂದಲೂ ಆತನನ್ನು ಕಾಡುತ್ತಿರುವ ಪ್ರಶ್ನೆ ಒಂದೇ - ದೇವರಿದ್ದಾನೆಯೇ ಇಲ್ಲವೇ ಎಂದು! ಜ್ಞಾನಿಗಳು ಇದಕ್ಕೆ ಉತ್ತರವನ್ನು ತಂತಮ್ಮಲ್ಲೇ ಕಂಡುಕೊಂಡರು. ಅಧ್ಯಾತ್ಮವಾದಿಗಳಿಗೆ ಮಾತ್ರ ಏನೇ ತಿಣುಕಾಡಿದರೂ ಇದಮಿತ್ಥಂ ಎಂದು ಹೇಳಲಾಗದ ಸಂದಿಗ್ಧ ಉಂಟಾದರೆ ನಿರೀಶ್ವರವಾದಿಗಳು ಖಡಾಖಂಡಿತವಾಗಿ ದೇವರ ಇರುವಿಕೆಯನ್ನು ಅಲ್ಲಗಳೆದಿದ್ದಾರೆ. ಈ ಅನಾದಿ - ಅನಂತ ವಿಶ್ವವು ಹಲವು ಪಂಡಿತೋತ್ತಮರ ಬುದ್ಧಿ ಮತ್ತೆಗೆ ಸಿಲುಕದ ಸೋಜಿಗವಾದರೂ ವಿಜ್ಞಾನಿಗಳು ಹೆಚ್ಚಿನಂಶ ನಿಗೂಢಗಳನ್ನು ಬಯಲಿಗೆಳೆದು ಪ್ರಯೋಗಸಹಿತ ಪ್ರಮಾಣೀಕರಿಸಿದ್ದಾರೆ. ಈಶ್ವರವಾದಿಗಳು ದೇವರು ನಿರಾಕಾರಿ, ಅಂತಃಚಕ್ಷುಗಳಿಂದ ಮಾತ್ರ ಅರಿಯುವ ಅಗೋಚರ ಶಕ್ತಿ ಎಂದರು. ಹಲವು ದೇವರುಗಳನ್ನು ಸೃಷ್ಟಿಸಿದರು, ತನ್ನಂತೆಯೇ ರೂಪ ಕೊಟ್ಟರು, ಗುಡಿಗಳಲ್ಲಿ ಬಂಧಿಸಿಟ್ಟರು. ಕಲ್ಲು ದೇವರ ವಿಗ್ರಹಕ್ಕೆ ಅಪಾರ ಪ್ರಮಾಣದ ಬೆಲೆಬಾಳುವ ಆಹಾರ ಪದಾರ್ಥಗಳನ್ನು ಪೂಜೆಯ ನೆಪದಲ್ಲಿ ಸುರಿದು ಪೋಲು ಮಾಡಿದರು. ಇಲ್ಲದ ದೇವರನ್ನು ಸೃಷ್ಟಿಸಿ ಮುಗ್ಧ ಜನರನ್ನು ನಂಬಿಸಿ ಸುಲಿಗೆ ಮಾಡಿದರು. ದೇವರ ಹೆಸರಿನಲ್ಲಿ ಮನುಷ್ಯ ಸ್ವಾರ್ಥಿಯಾಗತೊಡಗಿದ! ನಂಬಿಕೆ-ಅಪನಂಬಿಕೆ-ಮೂಢನಂಬಿಕೆ ಪರಸ್ಪರ ಮೇಲುಗೈಯಾಗಿ ಬೆಳೆಯತೊಡಗಿತು. ನಿರೀಶ್ವರವಾದಿಗಳು ಸ್ವತಂತ್ರವಾಗಿ ಯೋಚಿಸತೊಡಗಿದರು. ದೇವರ ಅಸ್ತಿತ್ವವನ್ನು ಪ್ರಾಚೀನರು ಒಪ್ಪಿದ್ದಾರೆ ಎಂಬುದು ಅದಕ್ಕೆ ಪುರಾವೆ ಖಂಡಿತ ಅಲ್ಲವೆಂದು ಅವರು ವಾದಿಸಿದರು. ಈ ಕೃತಿಯಲ್ಲಿ ಜುಗಲಬಂದಿಯಂತೆ ಈಶ್ವರವಾದಿ-ನಿರೀಶ್ವರವಾದಿ ತಂತಮ್ಮ ಅನಿಸಿಕೆಗಳನ್ನು ಪ್ರಸ್ತುತಪಡಿಸಿದಂತೆ ರೂಪಿಸಲಾಗಿದೆ. ಎಲ್ಲವೂ ದೈವ ನಿರ್ಮಿತವೆಂಬ ವಾದ ಈಶ್ವರವಾದಿಯದಾದರೆ ಈ ಭೌತಜಗತ್ತು ಕಾಲಾಂತರದಲ್ಲಿ ಉತ್ಕ್ರಾಂತಿಯಿಂದ ರೂಪುಗೊಂಡು ಬದಲಾಗುತ್ತಾ ಇಂದಿನ ಸ್ಥಿತಿ ತಲುಪಿದೆಯೆಂದು ಸ್ಪಷ್ಟನೇರ ಉತ್ತರಗಳಿಂದ ನಿರೀಶ್ವರವಾದಿ ಮನವರಿಕೆ ಮಾಡಿಕೊಟ್ಟಿದ್ದಾನೆ.