ಅಂಜನಾ ಹೆಗಡೆ ಕೃತಿಯನ್ನು ನಿರೂಪಿಸಿದ್ದಾರೆ. ಎಚ್ಚೆಸ್ವಿ ಅವರ ವೈಯುಕ್ತಿಕ ಜೀವನದ ಹಲವಾರು ಸಂಗತಿಗಳು ಅವರ ‘ಅನಾತ್ಮ ಕಥನ’ದಲ್ಲಿ ಈಗಾಗಲೇ ಮನೋಜ್ಞವಾಗಿ ನಿರೂಪಣೆಗೊಂಡಿವೆ. ‘ನೆನಪಿನ ಒರತೆ’ಯಲ್ಲಿ ಅವರು ತಮ್ಮ ಸಾಹಿತ್ಯಿಕ ಜೀವನದ ಸ್ಮರಣೀಯ ಮೈಲುಗಲ್ಲುಗಳನ್ನು ಅತ್ಯಂತ ವಿನಯ ಮತ್ತು ವಸ್ತುನಿಷ್ಠವಾಗಿ ದಾಖಲಿಸಿದ್ದಾರೆ. ತಾವು ಎದುರಿಸಿದ ಪ್ರತಿರೋಧಗಳನ್ನು, ಸಾಹಿತ್ಯಿಕ ವಾಗ್ವಾದಗಳನ್ನು ಸಮಚಿತ್ತದಿಂದ ನಿಭಾಯಿಸಿದ ಅವರ ರೀತಿ ಇಂದಿನ ಮತ್ತು ಮುಂದಿನ ಎಲ್ಲ ಸಾಹಿತಿಗಳಿಗೂ ಮಾದರಿಯಾಗಬಲ್ಲವು. ಕವಿಯಾಗಿ ಮಾತ್ರವಲ್ಲದೆ, ಕನ್ನಡ ಸಂಘದ ಸಂಸ್ಥಾಪಕರಾಗಿ, ಪು.ತಿ.ನ ಟ್ರಸ್ಟಿನ ಅಧ್ಯಕ್ಷರಾಗಿ, ‘ಅಭ್ಯಾಸ’ ಎಂಬ ಹಳಗನ್ನಡ ಸಾಹಿತ್ಯದ ಉಪನ್ಯಾಸ ಮಾಲಿಕೆಯ ನಿರ್ದೇಶಕರಾಗಿ ಅವರು ಸಲ್ಲಿಸಿದ ಸೇವೆಯ ಮಾಹಿತಿಯೂ ಇಲ್ಲಿದೆ. ಹೀಗೆ ಕಳೆದ ಐದಾರು ದಶಕಗಳ ಪರೋಕ್ಷ ಕನ್ನಡ ಸಾಹಿತ್ಯ ಚರಿತ್ರೆಯಾಗಿ ಈ ಕೃತಿ ಮಹತ್ವದ ಸ್ಥಾನ ಪಡೆದಿದೆ