Product Description
‘ರೈತನೊಬ್ಬನ ನೆನಪುಗಳು’ ಕೃತಿಯಲ್ಲಿ ಶ್ರೀ ಪೆಜತ್ತಾಯರ ಪಕ್ವ ಅನುಭವ, ಪ್ರಯೋಗಶೀಲತೆ, ಹೊಸತನಕ್ಕಾಗಿ ತಹತಹಿಸುವ ಮನಸ್ಥಿತಿ, ಸದಾ ಒಳ್ಳೆಯದನ್ನೇ ಪುರಸ್ಕರಿಸುವ ಅವರ ಮನೋಭಾವ, ಸರಳ ಅಭಿವ್ಯಕ್ತಿ, ಮಕ್ಕಳನ್ನೂ ಹಿಡಿದಿಡಬಲ್ಲ ಅವರ ಶೈಲಿ ಇವುಗಳು ವಿಕಾಸವಾಗುತ್ತಲೇ ಇರುವುದನ್ನು ಸಹೃದಯ ಓದುಗರು ಮನಗಾಣಬಹುದಾಗಿದೆ. ಇಲ್ಲಿ ಅವರ ಬರವಣಿಗೆಯ ವ್ಯಾಪ್ತಿ ದೊಡ್ಡದಾಗಿದೆ. ಕೃಷಿ, ಸ್ನೇಹ, ಸ್ಪಂದನೆಯ ಜೊತೆಗೆ, ಕಾಡು, ಪ್ರಾಣಿ, ನಗರ ಬದುಕು, ವರ್ತಮಾನ ಇವುಗಳೆಲ್ಲವನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ವರ್ತಮಾನದ ಸಮಸ್ಯೆಗಳಿಗೆ ಸ್ಪಂದಿಸುತ್ತಲೇ ಭವಿಷ್ಯದ ಬಗ್ಗೆಯೂ ಆದರ್ಶವೆನ್ನಬಹುದಾದ ಕನಸುಗಳಿವೆ. ಅವರ ಮಾತುಗಳಲ್ಲೇ ಹೇಳುವುದಾದರೆ ಅವು ‘ಅಜ್ಜನ ಕನಸುಗಳು!’
ಪ್ರಸ್ತುತ ಕೃತಿಯಲ್ಲಿನ ಅವರ ನಲವತ್ತೆಂಟು ಲೇಖನಗಳನ್ನೂ ಒಗ್ಗೂಡಿಸಲಾಗಿದೆ. ಅವುಗಳನ್ನು ಸ್ಥೂಲವಾಗಿ ನೆನಪು ಒನಪು, ಕಾಡು ಪ್ರಾಣಿ, ಕೃಷಿ ಖುಷಿ, ನಾಡು ಬೀಡು ಮತ್ತು ತವಕ ತಲ್ಲಣ ಎಂದು ಐದು ಭಾಗಗಳಲ್ಲಿ ವಿಂಗಡಿಸಲಾಗಿದೆ. ಯಾವ ಲೇಖನ ಯಾವ ವಿಭಾಗಕ್ಕೆ ಹೋದರೂ ಪೂರ್ಣ ಓದಿಗೆ ಚ್ಯುತಿಯಿಲ್ಲ. ಏಕೆಂದರೆ, ಸಾಹಿತ್ಯಲೋಕದ ಪರಿಭಾಷೆಯ ಚೌಕಟ್ಟಿನೊಳಗೆ ಪೆಜತ್ತಾಯರ ಬರಹಗಳನ್ನು ಇಟ್ಟು ನೋಡಲು ಆಗುವುದೇ ಇಲ್ಲ.
ಸಾಹಿತ್ಯಲೋಕದ ಯಾವುದೇ ಕಟ್ಟುಪಾಡುಗಳು, ಮುಲಾಜುಗಳೂ ಈ ಲೇಖಕರಿಗಿಲ್ಲ. ಅವರೆಂದೂ ತಮ್ಮನ್ನು ತಾವು ಲೇಖಕ ಎಂದು ಕರೆದುಕೊಳ್ಳುವುದಿರಲಿ, ಹಾಗೆಂದು ಭಾವಿಸಿಯೂ ಇಲ್ಲ. ‘ನಾನೊಬ್ಬ ಮಾಜಿ ರೈತ, ಮಡ್ಡ, ದಡ್ಡ’ ಎಂದು ಹೇಳಿ, ಎದುರಿಗೆ ಕುಳಿತಿರುವವರಲ್ಲಿ ನಗೆಯ ಬುಗ್ಗೆ ಉಕ್ಕಿಸುವ ಅವರೊಳಗೆ ಪ್ರಧಾನವಾಗಿ ಕಾಣುವುದು ರೈತನನ್ನೇ. ಆದರೆ ಮಿಶ್ರಬೆಳೆ ಪದ್ಧತಿಯಲ್ಲಿ ಉಪಉತ್ಪನ್ನಗಳಿರುವಂತೆ, ಪೆಜತ್ತಾಯರೊಳಗೆ ಒಬ್ಬ ಸಂಶೋಧಕ, ಒಬ್ಬ ಬರಹಗಾರ, ಒಬ್ಬ ಛಾಯಾಚಿತ್ರಕಾರ ಒಟ್ಟಾರೆಯಾಗಿ ಬಹುಮುಖೀ ಕಲಾವಿದನೊಬ್ಬನಿದ್ದಾನೆ. ಕೃಷಿ ಅವರ ಜೀವನದ ಸ್ಥಾಯಿಭಾವವಾದರೆ ಉಳಿದೆಲ್ಲವೂ ಸಂಚಾರೀ ಭಾವಗಳು! ಪೆಜತ್ತಾಯರ ಜೀವನಪ್ರೀತಿಯನ್ನು ಪ್ರತಿ ಲೇಖನದಲ್ಲೂ ಓದುಗ ಸವಿಯಬಹುದು.