Product Description
ಸಾಮಾನ್ಯ ನಾಗರಿಕರು ಸರ್ಕಾರದಿಂದ ಯಾವುದೇ ಕೆಲಸ ಮಾಡಿಸಿಕೊಳ್ಳಬೇಕಾದರೂ ಅದಕ್ಕೆ ಲಂಚ ನೀಡಬೇಕು. ಇಲ್ಲದಿದ್ದರೆ ರಾಜಕಾರಣಿ ಅಥವಾ ಅಧಿಕಾರಿಗಳ ಸಂಪರ್ಕ ಇರಬೇಕು. ಇದು ಎಲ್ಲ ರಾಜ್ಯಗಳ ಪರಿಸ್ಥಿತಿ. ಆದರೆ ಕರ್ನಾಟಕ ರಾಜ್ಯವು ಕಳೆದ ಎರಡು ವರ್ಷದ ಹಿಂದೆ ‘ಸಕಾಲ’ ಎಂಬ ಹೆಸರಿನ ಅಧಿನಿಯಮವನ್ನು ಜಾರಿಗೊಳಿಸಿ ನಾಗರಿಕರಿಗೆ ನಿಗದಿತ ಕಾಲಮಿತಿಯಲ್ಲಿ ಸೇವೆಯನ್ನು ನೀಡಲು ಮುಂದಾಗಿದೆ. ಸುಮಾರು 475 ಸೇವೆಗಳನ್ನು ಗುರುತಿಸಲಾಗಿದ್ದು ಇವುಗಳನ್ನು ನೀಡಲು ನಿರ್ದಿಷ್ಟ ಕಾಲಮಿತಿಯನ್ನು ನೀಡಲಾಗಿದೆ. ಹಾಗೊಮ್ಮೆ ಕಾಲಮಿತಿ ಮೀರಿದಲ್ಲಿ ಅಥವಾ ಸೇವೆ ನೀಡುವಲ್ಲಿ ವಿಳಂಬವಾದರೆ ನಾಗರಿಕರಿಗೆ ನಿಗದಿತ ಮೊತ್ತವನ್ನು ಪರಿಹಾರವಾಗಿ ನೀಡಲಾಗುವುದು. ಅಲ್ಲದೆ ಆ ಮೊತ್ತವನ್ನು ವಿಳಂಬಕ್ಕೆ ಕಾರಣರಾದ ಅಧಿಕಾರಿಗಳು/ಸಿಬ್ಬಂದಿಯಿಂದ ವಸೂಲು ಮಾಡಲಾಗುವುದು. ಇದರಿಂದ ಅಧಿಕಾರಿಗಳಲ್ಲಿ ಹೊಣೆಗಾರಿಕೆ ಹೆಚ್ಚಿದ್ದು, ಇದುವರೆಗೂ ಸುಮಾರು 5 ಕೋಟಿ ಅರ್ಜಿಗಳು ಸಕಾಲದಲ್ಲಿ ದಾಖಲಾಗಿದೆ. ಶೇಕಡ 90-95 ಪ್ರಕರಣಗಳಲ್ಲಿ ಸೇವೆಯನ್ನು ನಿಗದಿತ ಕಾಲಮಿತಿಯಲ್ಲಿ ವಿತರಿಸಲಾಗಿದೆ. ಈ ಅಧಿನಿಯಮವನ್ನು ನಾಗರಿಕರು ಉಪಯೋಗಿಸಿಕೊಳ್ಳುವುದು ಮುಖ್ಯ. ಈ ನಿಟ್ಟಿನಲ್ಲಿ ಈ ಕೃತಿ ಉಪಯುಕ್ತ ಎಂದು ನಂಬಿದ್ದೇವೆ.