Product Description
ಅರ್ಧ ಕಥಾನಕ ಎಂಬುದು ಬನಾರಸಿಯ ಆತ್ಮಚರಿತ್ರೆಯ ಹೆಸರು. ೧೭ನೇ ಶತಮಾನದಲ್ಲಿ ಮೊಗಲರ ಆಡಳಿತ ಕಾಲದಲ್ಲಿದ್ದ ಈ ಬನಾರಸಿ ಅರ್ಧಕಥಾನಕ ಎಂದು ಹೆಸರಿಡಲೂ ಕಾರಣವಿತ್ತು. ಜೈನ ನಂಬಿಕೆಯ ಪ್ರಕಾರ ಮನುಷ್ಯನ ಆಯಸ್ಸು ೧೧೦ ವರ್ಷ; ಬನಾರಸಿ ತನ್ನ ಆತ್ಮಕಥಾನಕವನ್ನು ಮುಗಿಸಿದಾಗ ಅವರ ವಯಸ್ಸು ೫೫. ಅಂದರೆ ಆಯಸ್ಸಿನ ಅರ್ಧಭಾಗ. ಹಾಗಾಗಿಯೇ ಇದಕ್ಕೆ ಅರ್ಧ ಕಥಾನಕ ಎಂದು ಕರೆದಿದ್ದ ಎಂದು ಹೇಳುತ್ತಾರೆ.
ವ್ಯಾಸರ ಈ ಕಥಾನಕ ಆತ್ಮಕಥಾನಕವಲ್ಲ; ಅಲ್ಲದೆಯೂ ಅಲ್ಲ. ತಮ್ಮ ಜೀವಿತ ಅವಧಿಯಲ್ಲಿ ವ್ಯಾಸರು ಇದನ್ನು ಬರೆಯಲಿಲ್ಲ. ಬರೆಯುವ ಉಮೇದೂ ಅವರಿಗಿರಲಿಲ್ಲ. ಏನಿದ್ದರೂ ಎಲ್ಲವನ್ನೂ ತಮ್ಮ ಕತೆಗಳಲ್ಲಿ ಹೇಳಿಕೊಳ್ಳುವ ನಂಬಿಕೆಯಲ್ಲಿ ಬದುಕಿದ್ದ ಎಂ.ವ್ಯಾಸರನ್ನು ಸಾವು ಬಂದು ಎತ್ತಿಕೊಂಡು ಹೋದದ್ದು ತೀರ ಅಚಾನಕ್ಕಾಗಿ. ಸಾವಿಗೆ ವಯಸ್ಸಿನ ಪರಿವೆ ಇರುವುದಿಲ್ಲ. ಅದು ಬರುವುದೂ, ಹೋಗುವುದೂ ಮನುಷ್ಯರಿಗೇಕೆ, ಯಾವ ಪ್ರಾಣಿಗೂ ತಿಳಿಯುವ ಸಂಗತಿಯಲ್ಲ; ಅದು ಅಚಾನಕ್ಕೇ. ವ್ಯಾಸರು ತೀರಿಕೊಂಡಾಗ ಅವರ ವಯಸ್ಸು ೬೮.