Product Description
ತತ್ತ್ವಶಾಸ್ತ್ರದಲ್ಲಿ ವಿಶ್ವದ ಮೂಲವಸ್ತುವಿನ ವಿಚಾರವಲ್ಲದೆ, ಪ್ರಮಾಣಶಾಸ್ತ್ರ, ಆತ್ಮವಿಚಾರ, ವಿಮುಕ್ತಿ, ಮುಂತಾದ ವಿಷಯಗಳು ಚರ್ಚೆಗೆ ಬರುತ್ತವೆ. ಇವಾವುದರ ಬಗೆಗೂ ಭಾರತೀಯ ದಾರ್ಶನಿಕ ಪರಂಪರೆಯ ವಿವಿಧ ಶಾಖೆಗಳು ಒಂದೇ ಉತ್ತರವನ್ನು ಕೊಟ್ಟಿಲ್ಲ. ದೇವರ ಕಲ್ಪನೆ, ವೈದಿಕ ಸಾಹಿತ್ಯವು ತತ್ತ್ವಶಾಸ್ತ್ರಕ್ಕೆ ಮೂಲಾಧಾರವೆಂಬ ಮಾತು, ಪರಮಾಣುವಾದ, ಇವುಗಳನ್ನು ಕುರಿತಂತೆ ಸಹ ಅಭಿಪ್ರಾಯಭೇದಗಳಿವೆ. ಅಂದರೆ, ಭಾರತೀಯ ತತ್ತ್ವಶಾಸ್ತ್ರವು ಬಹುಮುಖೀ ಪ್ರತಿಪಾದನೆಗಳ ಆಕರ. “ಬ್ರಹ್ಮನ್” ಎಂಬುದನ್ನು ಕುರಿತಂತೆ ಅನೇಕ ವ್ಯಾಖ್ಯಾನಗಳಿವೆ; ಅಂತೆಯೇ ಬೌದ್ಧ ಮತ್ತು ಜೈನ ತಾತ್ವಿಕ ಗ್ರಹಿಕೆಗಳಲ್ಲೂ ಭಿನ್ನತೆಯುಂಟು. ಯಾವ ದಾರ್ಶನಿಕ ಪಂಥವೂ ನೀತಿಬೋಧನೆಯನ್ನು ತತ್ತ್ವಶಾಸ್ತ್ರದ ಅವಿಚ್ಛಿನ್ನ ಭಾಗವೆಂದು ಪ್ರತಿಪಾದಿಸಿಲ್ಲ. ಆದ್ದರಿಂದ ಅನೇಕ ಭಾರತೀಯ ತತ್ತ್ವಶಾಸ್ತ್ರಗಳನ್ನು ಕುರಿತು ಹೇಳಬಹುದೇ ವಿನಾ ಒಂದು ತತ್ತ್ವಶಾಸ್ತ್ರ ಪ್ರಣಾಲಿಕೆಯ ಬಗೆಗಲ್ಲ. ಎಲ್ಲ ಶಾಖೆಗಳನ್ನೂ ಸಮಗ್ರವಾಗಿ ಪರಿಚಯಿಸಿಕೊಟ್ಟು, ಮೂಲಭೂತ ಅಂಶಗಳಾದ ಪ್ರಮಾಣ, ವಿಶ್ವದ ಅಸ್ತಿತ್ವ, ಪರಮಾಣುವಾದ, ಈಶ್ವರನ ಇರುವಿಕೆ, ಮುಂತಾದುವನ್ನು ಕುರಿತಂತೆ ವಿವಿಧ ಶಾಖೆಗಳ ದೃಷ್ಟಿಕೋನ ಮತ್ತು ಧೋರಣೆಗಳನ್ನು ಸರಳವಾಗಿ ಮತ್ತು ನಿಷ್ಕೃಷ್ಟವಾಗಿ ತಿಳಿಸಿಕೊಡುವ ಗ್ರಂಥ ಇದು. ಇದನ್ನು ಅಧಿಕೃತ ಕೈಪಿಡಿ ಎನ್ನಲಡ್ಡಿಯಿಲ್ಲ.
ಭಾರತೀಯ ತತ್ತ್ವಶಾಸ್ತ್ರವನ್ನು ಮೂಲಗ್ರಂಥಗಳ ಮೂಲಕ ಆಳವಾಗಿ ಅಭ್ಯಸಿಸಿ ಅನೇಕ ಅಧಿಕಾರಯುತ ಗ್ರಂಥಗಳನ್ನು ಪ್ರಕಟಿಸಿರುವ ಡಾ. ಮೃಣಾಲ್ ಕಾಂತಿ ಗಂಗೋಪಾಧ್ಯಾಯ ಇದರ ಕರ್ತೃ. ಕೊಲ್ಕತಾ ಮತ್ತು ಶಾಂತಿನಿಕೇತನ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರಾಗಿದ್ದವರು ಮತ್ತು ಡಾ. ದೇವಿಪ್ರಸಾದ್ ಚಟ್ಟೋಪಾಧ್ಯಾಯ ಅವರೊಡನೆ ಜಂಟಿಯಾಗಿ ಅನೇಕ ಕೃತಿಗಳನ್ನು ರಚಿಸಿರುವವರು.
ಇದನ್ನು ಅನುವಾದಿಸಿರುವ ಡಾ. ಬಿ.ಎನ್. ಸುಮಿತ್ರಾಬಾಯಿ ಸಂಸ್ಕೃತ ಪ್ರಾಧ್ಯಾಪಕರು, ಅತ್ತಿಮಬ್ಬೆ ಪ್ರಶಸ್ತಿ ಪಡೆದಿರುವ ಖ್ಯಾತ ವಿಮರ್ಶಕಿ, ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವ ಧೀಮಂತರು ಮತ್ತು ಬಹುಭಾಷಾ ವಿದುಷಿ. ಅವರು ಇಪ್ಪತ್ತಕ್ಕೂ ಹೆಚ್ಚು ಮೌಲಿಕ ಗ್ರಂಥಗಳನ್ನು ಪ್ರಕಟಿಸಿ ಸುವಿಖ್ಯಾತರಾಗಿದ್ದಾರೆ.