Product Description
“ಮನುಷ್ಯ ಜಾತಿ ತಾನೊಂದೆ ವಲಂ” ಎಂದು ಹೇಳಿದ ಪಂಪನಿಂದ ಇಂದಿನ ಕವಿಗಳವರೆಗೆ ಅಸಂಖ್ಯ ಚಿಂತಕರು ಜಾತಿಯ ಬಗ್ಗೆ ಚಿಂತಿಸಿರುವ ಪರಿ ಅನನ್ಯ. ಇಂದು ಭಾರತದ ಸಾಂಸ್ಕೃತಿಕ ಲೋಕ ಜಾಗತೀಕರಣ, ಖಾಸಗೀಕರಣ, ಉದಾರೀಕರಣಗಳೆಂಬ ತಲ್ಲಣಗಳ ವಿರುದ್ಧ ಸೆಣಸಬೇಕಾಗಿದೆ. ಇದರೊಂದಿಗೆ ಯಾವತ್ತಿನ ಕುಲದ ಪದ್ಧತಿಯ ಬಗೆಗೂ ಸೆಣಸಬೇಕಾಗಿದೆ. ಇದಕ್ಕೆ ಬೇಕಾದ ದ್ರವ್ಯ ನಮ್ಮ ಕಾವ್ಯ ಪರಂಪರೆಯಿಂದ ದಕ್ಕುತ್ತದೆ. ಇಲ್ಲಿ ಕುಲದ ನಿರಾಕರಣೆಯು ಸಿಟ್ಟು, ಕ್ರಾಂತಿ, ನೋವು ಮುಂತಾದ ಅನೇಕ ನೆಲೆಗಳಲ್ಲಿ ಒಡಮೂಡಿದೆ. ಅಂತಹ ನೆಲೆ ಮತ್ತು ಚಿಂತನಾ ಕ್ರಮದ ಪರಂಪರೆಯ ದಾಖಲೀಕರಣವಾಗಿ ಪ್ರಸ್ತುತ ಸಂಕಲನ ತಮ್ಮ ಕೈಯಲ್ಲಿದೆ. ಈ ಕೃತಿ ಪಂಪನಿಂದ ಇಲ್ಲಿಯ ಕವಿಗಳವರೆಗಿನ ಕಾವ್ಯಭಾಗ ಮತ್ತು ಸ್ವತಂತ್ರ ಕವಿತೆಗಳನ್ನು ಒಳಗೊಂಡಿದೆ. ಇವು ಜಾತಿ ನಿರಾಕರಣೆ ಎಂಬ ದಾರಿಯಲ್ಲಿ ಪೋಣಿಸಲ್ಪಟ್ಟಿವೆ. ಇದು ನಮ್ಮ ಕಾವ್ಯ ಪರಂಪರೆಯ ಹೆಗ್ಗಳಿಕೆಯಲ್ಲೊಂದು ಸಹ ಆಗಿದೆ. ಇಂತಹ ಕೃತಿ ಜಾತಿ ವಿನಾಶದ ಚಿಂತನೆ ಮತ್ತು ಹೋರಾಟದಲ್ಲಿ ತೊಡಗಿದ ಗೆಳೆಯರಿಗೆ ನಮ್ಮ ಪರಂಪರೆಯ ಸಾಂಸ್ಕೃತಿಕ ಬುತ್ತಿಯನ್ನು ತಮ್ಮ ಮುಂದಿನ ಪ್ರಯಾಣಕ್ಕಾಗಿ ಕೊಡುವ ಪ್ರಯತ್ನವಾಗಿದೆ.