Product Description
ಪೂರ್ಣಚಂದ್ರ ತೇಜಸ್ವಿಯವರು ಕಥೆ-ಕಾದಂಬರಿಗಳನ್ನಷ್ಟೇ ಅಲ್ಲದೆ, ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ನಿರಂತರ ಕೃಷಿಮಾಡಿದವರು. ಅವರು ಬರೆದದ್ದು ಒಂದೇ ನಾಟಕ. ಅದು ಯಮಳ ಪ್ರಶ್ನೆ. ಆ ನಂತರ ಅವರು ನಾಟಕ ಬರೆವ ಗೋಜಿಗೆ ಹೋಗಲೇ ಇಲ್ಲ. ನನಗೆ ರಂಗ ಕಲೆಯ ಬಗ್ಗೆಯಾಗಲೀ, ನಾಟಕಗಳ ಬಗ್ಗೆಯಾಗಲೀ ಹೆಚ್ಚು ಪರಿಶ್ರಮ ಇಲ್ಲ ಎಂದೇ ಹೇಳುತ್ತಿದ್ದರು. ಆದರೂ ರಂಗಭೂಮಿಗೂ ಅವರಿಗೂ ಅಪಾರ ನಂಟು. ಅದು ಒಬ್ಬ ನಾಟಕಕಾರನಿಗಿಂತ ಹೆಚ್ಚೆಂದೇ ಹೇಳಬಹುದು. ತಬರನ ಕಥೆ, ತುಕ್ಕೋಜಿ, ಕುಬಿ ಮತ್ತು ಇಯಾಲ, ಅಬಚೂರಿನ ಪೋಸ್ಟಾಫೀಸು, ಚಿದಂಬರ ರಹಸ್ಯ, ಕೃಷ್ಣೇಗೌಡರ ಆನೆ, ಜುಗಾರಿ ಕ್ರಾಸ್, ಕರ್ವಾಲೊ... ಹೀಗೆ ಅವರ ಸಾಲು ಸಾಲು ಕಥೆ-ಕಾದಂಬರಿಗಳು ರಂಗವೇರಿ ವಿಜೃಂಭಿಸಿವೆ. ಬಹುಶಃ ಇನ್ನಾರ ಕೃತಿಗಳೂ ಹೀಗೆ ರಂಗವೇರಿದ ಉದಾಹರಣೆಗಳಿಲ್ಲ. ಅವರ ಕೃತಿಗಳ ವೈಶಿಷ್ಟ್ಯವೇ ಅಂಥದ್ದು. ಪ್ರತಿಯೊಂದು ಕೃತಿಯು ಕೌತುಕ ಹುಟ್ಟಿಸುವ ಕಥಾನಕಗಳು. ಕಿರಗೂರಿನ ಗಯ್ಯಾಳಿಗಳು ಪೂರ್ಣಚಂದ್ರ ತೇಜಸ್ವಿಯವರ ಜನಪ್ರಿಯ ಕಾದಂಬರಿ. ಈ ಕಾದಂಬರಿಯನ್ನು ಲೇಖಕ ಅ. ನಾ. ರಾವ್ ಜಾದವ್ ನಾಟಕವಾಗಿ ರೂಪಾಂತರಿಸಿ ರಂಗದ ಮೇಲೆ ಯಶಸ್ವಿಯಾಗಿ ಪ್ರಯೋಗಿಸಿದ್ದಾರೆ. ಗ್ರಾಮ ಸೇವಕ ಶಂಕರಪ್ಪನಿಂದ ಹಿಡಿದು ಮಾರ, ಸಿದ್ಧ, ದಾನಮ್ಮ, ಸುಬ್ಬಯ್ಯ, ಸೀಗೇಗೌಡ, ಭೈರಪ್ಪ, ಕಾಳೇಗೌಡ - ಇತ್ಯಾದಿ, ತಮ್ಮದೇ ತಾಪತ್ರಯಗಳಲ್ಲಿ ಸಿಕ್ಕಿ ಒದ್ದಾಡುವ ಕಿರಗೂರಿನ ಜನರ ಜೊತೆಗೆ, ಹಗರಣಕ್ಕೆ ಕಾರಣವಾಗುವ ಹೆಬ್ಬಲಸಿನ ಮರವನ್ನೂ ರಂಗದ ಬೆಳಕಿಗೊಡ್ಡಿದ್ದಾರೆ.