Product Description
ಮೈಲುತುತ್ತ, ಚಕ್ರವರ್ತಿ ಚಂದ್ರಚೂಡ್ ಅವರ ಎರಡನೇ ಪದ್ಯ ಸಂಕಲನ. ಮೊದಲನೆ ಸಂಕಲನ ‘ಖಾಲಿ ಶಿಲುಬೆ’ಯಲ್ಲಿ ಪಾಪಿಯೊಬ್ಬನ ಪ್ರೇಮಪದ್ಯಗಳನ್ನು ನೀಡಿದ್ದ ಚಕ್ರವರ್ತಿ, ‘ಮೈಲುತುತ್ತ’ ಸಂಕಲನದಲ್ಲಿ ‘ವಿದ್ರೋಹದ ಪದ್ಯ’ಗಳನ್ನು ನೀಡಿದ್ದಾರೆ. ದೇಶ, ಧರ್ಮ, ಸಂಸ್ಕಾರ – ಸಂಸ್ಕೃತಿಯ ಹೆಸರಲ್ಲಿ ಪುರೋಹಿತಷಾಹಿ ಮತ್ತು ಬಂಡವಾಳಷಾಹಿ ನಡೆಸುವ ದೌರ್ಜನ್ಯ ಹಾಗೂ ಪಿತೃಪ್ರಧಾನ ವ್ಯವಸ್ಥೆಯ ಶೋಷಣೆಗಳ ವಿರುದ್ಧ ದನಿಯೆತ್ತುವ ಪದ್ಯಗಳು ಈ ಪುಸ್ತಕದಲ್ಲಿದೆ. ಜೊತೆಗೆ ವಿಷಾದ ಭಾವದ ದಟ್ಟ ಎಳೆ ಬೆಸೆದ ಸ್ವಗತಪದ್ಯಗಳೂ ಇವೆ. ಸಂಕಲನದ ಪ್ರೇಮಪದ್ಯಗಳು ಕೂಡ ತೀವ್ರತೆಯಿಂದ ಕೂಡಿದ್ದು ಗಾಢ ಅನುಭವವನ್ನು ಕಟ್ಟಿಕೊಡುವಂತಿವೆ.
ಈ ಪದ್ಯಗಳಲ್ಲಿ ಅಂಬೇಡ್ಕರ್, ಸೌಜನ್ಯ, ರೋಹಿತ, ಕನ್ಹಯ್ಯ, ಜಂಗಲ್ ಜಾಕಿಗಳು ಇದ್ದಾರೆ. ಸೂಳೆಯರು. ಭಿಕ್ಷುಕರು, ಲೈಂಗಿಕ ಅಲ್ಪಸಂಖ್ಯಾತರು ಇದ್ದಾರೆ. ಸಾಮಾನ್ಯ ಜನಸಮುದಾಯವೇ ಇಲ್ಲಿ ಕಾವ್ಯಗಳಾಗಿ ಒಡಮೂಡಿವೆ. ‘ಮೈಲುತುತ್ತ’ ಸಂಕಲನದ ಮೂಲಕ ಸದ್ಯದ ಕಾವ್ಯಲೋಕದಲ್ಲಿ ಭಿನ್ನ ವಸ್ತುವಿಷಯ ಮತ್ತು ಆಕರ್ಷಕ ನಿರೂಪಣೆಯಿಂದ ಹೊಸ ಓದಿನ ಲೋಕವನ್ನು ತೆರೆದಿಟ್ಟಿದ್ದಾರೆ ಚಕ್ರವರ್ತಿ.
ಕವಿ: ಚಕ್ರವರ್ತಿ ಚಂದ್ರಚೂಡ್
ಕೃತಿ: ಮೈಲುತುತ್ತ – ಪದ್ಯ ಸಂಕಲನ
ಬೆಲೆ: 150 ರೂ.