Product Description
ಈಟಿವಿ, ಉದಯ ಟೀವಿಗಳಲ್ಲಿ ಕ್ರೈಮ್ ಕತೆ ಹೇಳುತ್ತಿದ್ದ; ಪತ್ರಕರ್ತನ ವಿವರ, ಲೇಖನ ಒಳನೋಟ, ಸಣ್ಣಕತೆಗಾರನ ಕ್ಲುಪ್ತತೆ, ಚರಿತ್ರಕಾರನ ದರ್ಶನ ಎಲ್ಲವನ್ನೂ ಒಳಗೊಂಡಂತೆ ಬರೆಯುವ ಬಾಲಕೃಷ್ಣ ಕಾಕತ್ಕರ್, ಬೆಂಗಳೂರಿನ ಕತೆಯನ್ನು ಹಿಡಿದಿಟ್ಟಿದ್ದಾರೆ. ಇಲ್ಲಿನ ಒಂದೊಂದು ಪಾತ್ರವೂ ನಿಮ್ಮನ್ನು ಬೆಂಗಳೂರಿನ ಸಂದಿಗೊಂದಿಗಳಲ್ಲಿ ಸುತ್ತಾಡಿಸಿ, ರಾಜರಸ್ತೆಗೆ ತಂದುಬಿಡುತ್ತದೆ. ಬೆಂಗಳೂರಿನ ಮಧ್ಯಮ ವರ್ಗ, ಎಲೈಟ್ ಜನಜೀವನ ಮತ್ತು ಸ್ಲಮ್ಮಿನ ಕತೆ ಪ್ರತ್ಯೇಕವಾಗಿ ಕೆಲವು ಕತೆ ಕಾದಂಬರಿಗಳಲ್ಲಿ ಬಂದಿದೆಯಾದರೂ ಇಡೀ ಬೆಂಗಳೂರನ್ನು ಹೀಗೆ ಹಿಡಿಯುವ ಪ್ರಯತ್ನ ಅಷ್ಟಾಗಿ ಆಗಿಲ್ಲ. ಕಾಕತ್ಕರ್ ಕ್ರೈಮು ಎಂಬ ಕನ್ನಡಿಯನ್ನಿಟ್ಟುಕೊಂಡು ಬೆಂಗಳೂರಿನ ಪ್ರೈಮ್ ಟೈಮನ್ನು ನಮಗೆ ತೋರಿಸುತ್ತಾರೆ.
ಸರಳ ಭಾಷೆ, ರೋಚಕ ತಿರುವು, ನಾವು ಕಂಡು ಕೇಳಿರದ ಪಾತ್ರಧಾರಿಗಳು, ಫಲುಕು ಪ್ರೀತಿ, ತೀವ್ರ ವಾಂಛೆ, ಅತೀವ ವಿಷಾದ, ಉಲ್ಲಸಿತ ಬದುಕು-ಇವೆಲ್ಲವೂ ಈ ಕಾದಂಬರಿಯಲ್ಲಿವೆ. ಏಕಕಾಲಕ್ಕೆ ಮೆಟ್ರೋಪಾಲಿಟನ್ ಮತ್ತು ಕಾಸ್ಮೋಪಾಲಿಟನ್ ನಗರಕ್ಕೆ ಆತ್ಮವಿರುವುದಿಲ್ಲ. ಹೀಗಾಗಿ ಆತ್ಮಕತೆಯೂ ಇರುವುದಿಲ್ಲ. ಅಂಥ ನಗರದ ಕತೆ ಬಾರುಗಳಲ್ಲಿ, ಪೊಲೀಸ್ ಲಾಕಪ್ಪುಗಳಲ್ಲಿ, ಓಣಿಗಳಲ್ಲಿ, ಸ್ಲಮ್ಮುಗಳ ಪುಟ್ಟ ಕೋಣೆಗಳಲ್ಲಿ, ಗಾರ್ಮೆಂಟ್ ಫ್ಯಾಕ್ಟರಿಯ ಬಟ್ಟೆ ಬದಲಾಯಿಸುವ ಪುಟ್ಟ ರೂಮಿನಲ್ಲಿ, ಬಿಟಿಎಸ್ ಬಸ್ಸಿನ ವಾಸನೆಯಲ್ಲಿ,ಆಟೋದ ಸದ್ದಿನಲ್ಲಿ ಹಂಚಿಹೋಗಿರುತ್ತದೆ. ಅವನ್ನೆಲ್ಲ ಬೆಂಗಳೂರಿಗೊಪ್ಪುವ ಭಾಷೆಯಲ್ಲಿ ಕಾಕತ್ಕರ್ ಪೋಣಿಸಿದ್ದಾರೆ.