Quantity
Product Description
ಮುಂಬಯಿಯ ಹಿರಿಯ ಕನ್ನಡ ಸಾಧಕರಲ್ಲಿ ಉಮಾ ರಾಮರಾವ್ ಅವರೂ ಒಬ್ಬರು. ಇಂಜಿನಿಯರಿಂಗ್ ಡಾಕ್ಟರೇಟ್ ಪಡೆದು ಮುಂಬಯಿಯ ಶಾಹ ಅಂಡ್ ಆಂಕರ್ ಕಚ್ಚಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ, ಪ್ರಾಚಾರ್ಯರಾಗಿ ಕೆಲಸ ಮಾಡುತ್ತಲೇ ಕನ್ನಡದಲ್ಲಿ ಪ್ರಭುತ್ವ ಸಾಧಿಸಿ ಓದು ಬರವಣಿಗೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಉಮಾ ಅವರು ನಾಡಿನ ನಾಮಾಂಕಿತ ಸಾಹಿತಿ ಡಾ। ಎಸ್.ಎಲ್. ಭೈರಪ್ಪ ಅವರ ನಿಕಟವರ್ತಿಗಳಲ್ಲಿ ಒಬ್ಬರು. 'ಭೈರಪ್ಪನವರ ಪರ್ವ: ಆಯಾಮ ಮತ್ತು ಅನನ್ಯತೆ' ಅವರ ಪ್ರಕಟಿತ ಕೃತಿ. 'ಪರ್ವ' ಹಾಗೂ 'ಉತ್ತರಕಾಂಡ' ಕಾದಂಬರಿಗಳನ್ನು ತೌಲನಿಕವಾಗಿ ಅಧ್ಯಯನ ಮಾಡಿ ಮುಂಬಯಿ ವಿಶ್ವವಿದ್ಯಾಲಯದಿಂದ ಎರಡನೆಯ ಬಾರಿಗೆ ಡಾಕ್ಟರೇಟ್ ಪದವಿ ಪಡೆದು ಅಚ್ಚರಿಪಡುವಂತೆ ಮಾಡಿದ್ದಾರೆ. ಈ ಮಹಾಪ್ರಬಂಧ ಇದೀಗ ಬೆಳಕು ಕಾಣುತ್ತಿರುವುದು ಸಂತೋಷದ ಸಂಗತಿ. ಸದ್ಯ ಅವರು ಮುಂಬಯಿ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ವಿಭಾಗದ ಉನ್ನತಿಗಾಗಿ ಶ್ರಮಿಸುತ್ತಿದ್ದಾರೆ.
ಡಾ| ಎಸ್.ಎಲ್. ಭೈರಪ್ಪನವರ 'ಪರ್ವ' ಒಂದು ಮಹಾಕಾದಂಬರಿ. ಇದು ಕನ್ನಡ ಸಾಹಿತ್ಯದಲ್ಲಿ ಮೂಡಿದ ಬಳಿಕ 'ಪುರಾಣ'ವನ್ನು ವಾಸ್ತವದ ಕನ್ನಡಿಯ ಮೂಲಕ ನೋಡುವ ಕಥನಸಾಹಿತ್ಯದ ಹೊಳೆಯೇ ಕನ್ನಡದಲ್ಲಿ ಹರಿಯಿತು. ಇಂದಿಗೂ ಈ ಪ್ರವಾಹ ನಿಂತಿಲ್ಲ. ಇಂಥ ಪಥಪ್ರದರ್ಶಕ ಕೃತಿಯನ್ನು ಅದರ ಮೂಲ ಆಕರವಾದ ವ್ಯಾಸರ ಮಹಾಭಾರತದ ಹಿನ್ನೆಲೆಯಲ್ಲಿರಿಸಿ ಹಲವು ಮಗ್ಗಲುಗಳಿಂದ ನೋಡಿ ಬೆಲೆಕಟ್ಟುವ ಪ್ರಾಮಾಣಿಕ ಪ್ರಯತ್ನ ಡಾ| ಉಮಾ ರಾಮರಾವ್ ಅವರ ಮಹಾಪ್ರಬಂಧದಲ್ಲಿ ಆಗಿದೆ. ಅವರು 'ಪರ್ವ'ದೊಡನೆ 'ಉತ್ತರಕಾಂಡ'ವನ್ನೂ ಸೇರಿಸಿಕೊಂಡು ತಮ್ಮ ಪ್ರಬಂಧವನ್ನು ರಚಿಸಿರುವುದರ ಮೂಲಕ ಭೈರಪ್ಪನವರು ನಮ್ಮ ಇತಿಹಾಸಕಾವ್ಯಗಳೆರಡನ್ನೂ ಹೇಗೆ ಬಳಸಿಕೊಂಡಿದ್ದಾರೆಂಬ ಸಮಗ್ರಚಿತ್ರಣ ಸಿಗುವಂತಾಗಿದೆ. ತಿಳಿಯಾದ ಭಾಷೆಯಲ್ಲಿ, ಆಧಾರಗಳೊಂದಿಗೆ ಮೈದಳೆದ ಈ ಸಂಶೋಧನಕೃತಿ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿಯೋ ಅಂತರ್ಜಾಲದ ಪದರಗಳಲ್ಲಿಯೋ ಕಣ್ಮರೆಯಾಗದೆ ಆಸಕ್ತರ ಪಾಲಿಗೆ ಪುಸ್ತಕರೂಪದಲ್ಲಿ ಸಿಗುವಂತಾಗಿರುವುದು ಭೈರಪ್ಪನವರ ಕಾದಂಬರಿಗಳ ಓದುಗರಿಗೆ ಹೆಚ್ಚಿನ ನೆರವೀಯುವುದರಲ್ಲಿ ಸಂದೇಹವಿಲ್ಲ.
Binding
Soft Bound
Author
Dr Uma Ram Rao
Number of Pages
452
Publisher
Saahitya Bhandaara
Publication Year
2025
Height
4 CMS
Length
22 CMS
Weight
500 GMS
Width
14 CMS
Language
Kannada