ಬಾಲ ಗಂಗಾಧರ ತಿಲಕರು ಬ್ರಿಟಿಷರಿಂದ ಸ್ವರಾಜ್ಯವನ್ನು ಆಗ್ರಹಿಸಿದ ಮೊದಲ ನಾಯಕ. ಮರಾಠ ಹಾಗೂ ಕೇಸರಿ ಪತ್ರಿಕೆಯ ಮೂಲಕ ಜನಜಾಗೃತಿಯನ್ನು ಬೆಳೆಸಿದರು. ವಾರಪತ್ರಿಕೆಯಾಗಿದ್ದ ಕೇಸರಿ ದಿನಪತ್ರಿಕೆಯಾಗಿ ಇಂದಿಗೂ ಪ್ರಕಟವಾಗುತ್ತಿದೆ. ತಿಲಕರು 1894ರಲ್ಲಿ ಮೊದಲ ಬಾರಿಗೆ ಸಾರ್ವಜನಿಕ ಗಣೇಶೋತ್ಸವ ಆಚರನೆಯನ್ನು ಜಾರಿಗೆ ತಂದರು. ಆದರಣೆಯ ಅವಧಿಯಲ್ಲಿ ನಡೆಯುತ್ತಿದ್ದ ಭಜನೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದರು. ಹಾಗೆಯೇ 1895ರಲ್ಲಿ ಶಿವಾಜಿ ಮಹಾರಾಜರ ಹುಟ್ಟುಹಬ್ಬವನ್ನು ‘ಶಿವ ಜಯಂತಿ’ ಎಂದು ಆಚರಿಸುವುದರ ಮೂಲಕವೂ ಜನಸಂಘಟನೆಯನ್ನು ಮಾಡಿದರು. 1880ರಲ್ಲಿ ಡೆಕ್ಕನ್ ಎಜುಕೇಶನ್ ಸೊಸೈಟಿಯ ವ್ಯಾಪ್ತಿಯಲ್ಲಿ ಆರಂಭಿಸಿದ ಫರ್ಗ್ಯುಸನ್ ಕಾಲೇಜು ಇಂದಿಗೂ ನಡೆಯುತ್ತಿದೆ. ತಿಲಕರು ಆರಂಭಿಸಿದ ‘ಸ್ವದೇಶಿ ಚಳವಳಿ’ ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅಪಾರ ಪ್ರಭಾವವನ್ನು ಬೀರಿತು. ತಿಲಕರು ‘ದ ಆರ್ಕ್ಟಿಕ್ ಹೋಮ್ ಇನ್ ವೇದಾಸ್’ ಹಾಗೂ ‘ಶ್ರೀಮದ್ ಭಗವತ್ ಗೀತಾ ರಹಸ್ಯ’ ಎನ್ನುವ ಗ್ರಂಥಗಳನ್ನು ಬರೆದಿರುವರು.