Product Description
ಪಂಜೆ ಮಂಗೇಶರಾಯರು ಕನ್ನಡಕ್ಕೆ ಅನೇಕ ಹೊಸದುಗಳನ್ನು ಕಾಣ್ಕೆಯಾಗಿ ಕೊಟ್ಟವರು. ಸುತ್ತಿನ ತುಳು, ಕೊಂಕಣಿ, ಕೊಡವ ಭಾಷಿಕ ಸಂಸ್ಕೃತಿಯನ್ನು ಕನ್ನಡದೊಂದಿಗೆ ಒಂದಾಗಿಸಿದವರು. ಶಾಲೆಗಳಲ್ಲಿ ಬಾಲಕರನ್ನು ಕುಣಿಸಿ, ತಾವೂ ಕುಣಿದು ಅವರ ಮನಸ್ಸನ್ನು ಅರಳಿಸಿದವರು. ಅವರಿಗಾಗಿ ಹಾಡು, ಕತೆ ಬರೆದವರು. ಸೃಜನಶೀಲತೆಯ ಜೊತೆಗೆ ಶಾಸ್ತ್ರ ಪಾಂಡಿತ್ಯವನ್ನು ಮೈಗೂಡಿಸಿಕೊಂಡವರು. ಆಧುನಿಕ ಶಿಕ್ಷಣಕ್ಕೆ ಪ್ರವೇಶವಾಗಿ ಇಂಗ್ಲಿಷ್-ಕನ್ನಡ ನಿಘಂಟು, ಕನ್ನಡ ಮೂಲ ವ್ಯಾಕರಣ, ಶಬ್ದಮಣಿದರ್ಪಣ - ಕೇಶಿರಾಜಕೃತ ವ್ಯಾಕರಣದ ಪರಿಷ್ಕೃತ ಸಂಪಾದನೆಯನ್ನು ರೂಪಿಸಿದರು. ತಮ್ಮ ಕಾಲದ ಆಯ್ದ ಕವನಗಳ ಸಂಕಲನಗಳನ್ನು - ‘ಕನ್ನಡ ಮೊದಲನೆಯ ಪದ್ಯಪುಸ್ತಕ’ (1912), ‘ಕನ್ನಡ ಎರಡನೆಯ ಪದ್ಯ ಪುಸ್ತಕ’ (1919) ಹಾಗೂ ‘ಕನ್ನಡ ಮೂರನೆಯ ಪದ್ಯ ಪುಸ್ತಕ’ (1920)ಗಳನ್ನು - ಪಠ್ಯ ಪುಸ್ತಕಗಳ ರೂಪದಲ್ಲಿ ಹೆಣೆದುಕೊಟ್ಟವರು.
ಪಂಜೆ ಮಂಗೇಶರಾಯರು ಕನ್ನಡ ನವೊದಯದ ಮಹಾಬೆಳಗು ಎನ್ನುವುದು ಒಂದು ರೂಪಕ. ಹತ್ತೊಂಬತ್ತನೆಯ ಶತಮಾನದ ಕೊನೆಯ ಹಾಗೂ ಇಪ್ಪತ್ತನೆಯ ಶತಮಾನದ ಮೊದಲ ಅರ್ಧದ ಕಾಲಾವಧಿಯಲ್ಲಿ ಈ ಮಹಾಬೆಳಗು ಕನ್ನಡ ಸಾಹಿತ್ಯ ರಂಗವನ್ನು ಬೆಳಗಿಸಿತು. ಈ ಮಹಾಪರ್ವದ ಮೊದಮೊದಲ ದಿನಗಳಲ್ಲಿ ಕನ್ನಡವನ್ನು ಸಿಂಗರಿಸಿದವರಲ್ಲಿ ಪಂಜೆಯವರು ಪ್ರಮುಖರು.